Thursday, February 27, 2014

ಶ್ರೀ ಚೋಳಶೆಟ್ಟಿ ಬಸದಿಯ ಶ್ರೀ ಪದ್ಮಪ್ರಭ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರತಿಷ್ಠೆ ಹಾಗೂ ಪೂಜಾ ಕಾರ್ಯಕ್ರಮ

 ಶ್ರೀ ಚೋಳಶೆಟ್ಟಿ ಬಸದಿಯ ಶ್ರೀ ಪದ್ಮಪ್ರಭ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರತಿಷ್ಠೆ ಹಾಗೂ ಪೂಜಾ ಕಾರ್ಯಕ್ರಮ



ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಫೆಬ್ರುವರಿ ೨೦ ಗುರುವಾರದಿಂದ ೨೨ ಶನಿವಾರದ ವರೆಗೆ ಮೂರು ದಿನಗಳ ಕಾಲ ಮೂಡುಬಿದಿರೆ ಶ್ರೀ ಚೋಳಶೆಟ್ಟಿ ಬಸದಿಯ ಶ್ರೀ ಪದ್ಮಪ್ರಭ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರತಿಷ್ಠೆ ಹಾಗೂ ಪೂಜಾ ಕಾರ್ಯಕ್ರಮ ಜರುಗಲಿರುವುದು. ಈ ಬಸದಿಯ ಮೂಲಸ್ವಾಮಿ ಪದ್ಮಪ್ರಭ ಸ್ವಾಮಿ ಹಾಗೂ ೨೪ ತೀರ್ಥಂಕರರ ದರ್ಶನ ಮಾಡುವದರಿಂದ ರವಿದೋಷವಿರುವವರಿಗೆ ಹಾಗೂ ನವಗ್ರಹ ದೋಷ ಇರುವವರಿಗೆ ಪರಿಹಾರ ಇರುವುದೆಂದು ನಂಬಲಾಗಿದೆ. ಅಂತೆಯೇ ರತ್ನತ್ರಯ ಧರ್ಮಲಾಭದಿಂದ ಸಕಲ ಕರ್ಮಕ್ಷಯವಾಗುವುದೆಂದು ಜೈನ ಧರ್ಮದ ನಂಬಿಕೆಯಾಗಿದೆ. ಇಲ್ಲಿಯ ಚಾರುಕೀರ್ತಿ ಭಟ್ಟಾರಕ ಪರಂಪರೆಯ ಶಿಷ್ಯವರ್ಗದವರಾದ ಚೋಳ ಶೆಟ್ಟಿ ಎನ್ನುವ ಶ್ರೀಮಂತ ವರ್ತಕನು ಈ ಬಸದಿಯನ್ನು ಕಟ್ಟಿಸಿ ಶ್ರೀಮಠಕ್ಕೆ ಒಪ್ಪಿಸಿದನು. ಇವನೇ ಗುರುಗಳ ಬಸದಿಯಲ್ಲಿ ಗುರುಗಳಿಗ ಶಿಲಾಪೀಠವನ್ನು ರಚಿಸಿ ರತ್ನಖಚಿತ ಆಭರಣಗಳನ್ನು ಮಂಟಪಕ್ಕೆ ಅಲಂಕಾರವಾಗಿ ಜೋಡಿಸಿದ ಎಂದು ರಮಾರಾಣಿ ಶೋಧ ಸಂಸ್ಥಾನದಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಇಲ್ಲಿ ಸುಮಾರು ೩೫ಕ್ಕಿಂತಲೂ ಹೆಚ್ಚು ತಾಮ್ರಶಾಸನಗಳು ಭೂಗರ್ಭದಲ್ಲಿದ್ದು ೧೯೪೦ರ ಸುಮಾರಿಗೆ ಆ ಎಲ್ಲಾ ತಾಮ್ರ ಪತ್ರಗಳನ್ನು ಶ್ರೀಮಠದ ಸಂಶೋಧನಾ ಸಂಸ್ಥೆಯಲ್ಲಿ ಜತನದಿಂದ ಅಚ್ಚುಕಟ್ಟಾಗಿ ಇರಿಸಲಾಗಿದೆ. ಹಾಗೂ ಇವುಗಳ ಅಧ್ಯಯನವನ್ನು ಮಾಡಲಾಗಿದೆ.
೧೯೯೫ರ ನಂತರ ಇದೇ ಪ್ರಥಮ ಬಾರಿಗೆ ಮೂರು ದಿನಗಳ ಕಾರ್ಯಕ್ರಮ ಈ ಕೆಳಗಿನಂತೆ ಹಮ್ಮಿಕೊಳ್ಳಲಾಗಿದೆ
ದಿನಾಂಕ ೨೦ರಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ವಿಮಾನಶುದ್ಧಿ, ಪಂಚಾಮೃತಾಭಿಷೇಕಾಭಿಷೇಕದೊಂದಿಗೆ ಪೂಜಾ ಕಾರ್ಯಕ್ರಮವು ಆರಂಭಗೊಳ್ಳುವುದು. ಮಧ್ಯಾಹ್ನ ೨ರಿಂದ ಶ್ರೀ ಬ್ರಹ್ಮದೇವರ ಪ್ರತಿಷ್ಠೆ.
೨೧ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಕ್ಷೇತ್ರಪಾಲ ಪ್ರತಿಷ್ಠೆ, ಪಂಚಾಮೃತ ಅಭಿಷೇಕ. ಮಧ್ಯಾಹ್ನ ೨ ಗಂಟೆಯಿಂದ ಶ್ರೀ ಪದ್ಮಾವತಿದೇವಿ ಪ್ರತಿಷ್ಠೆ. ಸಂಜೆ ೬.೦೦ರಿಂದ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ.
೨೨ರಂದು ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಪದ್ಮಪ್ರಭ ಸ್ವಾಮಿಗೆ ೨೪ ಕಲಶಗಳ ಅಭಿಷೇಕ. ಮಧ್ಯಾಹ್ನ ಗಂಟೆ ೨.೦೦ರಿಂದ ಚತುರ್ವಿಂಶತಿ ತೀರ್ಥಂಕರ ಆರಾಧನೆ.
ಪೂಜಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ ಕೋರುವುದಾಗಿ ಶ್ರೀ ಜೈನಮಠದ ವ್ಯವಸ್ಥಾಪಕ ಶ್ರೀ ಸಂಜಯಂತ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

No comments:

Post a Comment