ಮೂಡುಬಿದಿರೆ ಶ್ರೀಶ್ರೀಗಳ ಉತ್ತರಭಾರತ ಪ್ರವಾಸ
ಉತ್ತರಪ್ರದೇಶದ ಫಿರೋಜಾಬಾದ್ ಬಳಿಯ ಶಿಕೋಹಾಬಾದ್ನಲ್ಲಿ ದಿಗಂಬರ ಜೈನ ಪರಂಪರೆಯ ಭರತ ಚಕ್ರವರ್ತಿಯ ಪ್ರಪ್ರಥಮ ಅತಿ ಎತ್ತರದ ಅರ್ವಾಚೀನ ೩೧ ಅಡಿ ಎತ್ತರದ ಏಕಶಿಲಾ ವಿಗ್ರಹದ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಾಗಿದ್ದು ೧೮. ೦೨. ೨೦೧೪ರಂದು ಅಪರಾಹ್ನ ೧. ೩೫ ಗಂಟೆಗೆ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಥಮ ಮಹಾಮಸ್ತಕಾಭಿಷೇಕದ ಪ್ರಥಮ ಕಲಶ ಹಾಗೂ ಸುವರ್ಣಕಲಶಾಭೀಷೇಕವನ್ನು ಮೂರ್ತಿಪ್ರತಿಷ್ಠಾಪಕ ಕುಟುಂಬವರ್ಗದವರೊಂದಿಗೆ ಜೊತೆಯಾಗಿ ನೆರವೇರಿಸಿದರು. ಲಕ್ಷಾಂತರ ಮಂದಿ ಭಕ್ತಾದಿಗಳು ನೆರೆದ ಸಮಾರಂಭದ ಬೃಹತ್ ಮೂರ್ತಿ ಲೋಕಾರ್ಪಣಾ ಕಾರ್ಯಕ್ರಮವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ನೆರವೇರಿಸಿದ್ದರು. ೧೦೮ ಪ್ರಜ್ಞಾಶ್ರಮಣ ಅಮಿತಸಾಗರ ಮುನಿಮಹಾರಾಜರ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕವು ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು. ಹಸ್ತಿನಾಪುರದ ರವೀಂದ್ರ ಬ್ರಹ್ಮಚಾರಿ, ಮಹೇಂದ್ರ ಜೈನ್, ಅನಿಲ್ ಜೈನ್, ಅಶೋಕ್ ಜೈನ್, ಅಲೋಕ್ ಜೈನ್, ಹಾಗೂ ಧರಮ್ಚಂದ್ ಶಾಸ್ತ್ರಿ ಮೊದಲಾದವರು ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡರು. ದಿನಂಪ್ರತಿ ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು ಭಕ್ತಸಮೂಹ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾದರು. ಈಗಾಗಲೇ ಮಧ್ಯಪ್ರದೇಶ ರಾಜ್ಯದ ಇಂದೂರು ಬಳಿಯ ಬೆಟ್ಟದ ಮೇಲಿರುವ ಬೆಟ್ಟವನ್ನೇ ಕೆತ್ತಿ ನಿರ್ಮಿಸಿದ ಭಗವಾನ್ ಆದಿನಾಥರ ಭಾವನಗಜದ ಬಡವಾನಿಯ ಬಡೇಬಾಬ ಎಂದು ಪ್ರಸಿದ್ಧವಾದ ಪ್ರಥಮ ತೀರ್ಥಂಕರ ಪ್ರತಿಮೆಯು ೮೪ ಅಡಿ ಉನ್ನತವಾಗಿದ್ದು ಎತ್ತರದಲ್ಲಿ ಹಾಗೂ ಪ್ರಾಚೀನದಲ್ಲಿ ಇದೇ ಅತ್ಯಂತ ಪ್ರಾಚೀನ ಮೂರ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ.
ಅಲ್ಲಿಂದ ಮೂಡುಬಿದಿರೆ ಶ್ರೀಶ್ರೀಗಳು ಆಗ್ರಾದಲ್ಲಿ ವಿರಾಜಮಾನರಾದ ಕ್ರಾಂತಿಕಾರಿ ಸಂತ ೧೦೮ ತರುಣಸಾಗರ ಮುನಿ ಮಹಾರಾಜ್ ಹಾಗೂ ದೆಹಲಿಯ ಬಲ್ಬೀರ್ ನಗರ್, ಸೆಕ್ಟರ್ ೪ರಲ್ಲಿ ಭಗವಾನ್ ಆದಿನಾಥರ ನೂತನ ಜಿನಮಂದಿರದ ಪಂಚಕಲ್ಯಾಣದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ನಾವೆಲ್ಲರೂ ಮೂರ್ತಿಯಲ್ಲಿ ಮೂರ್ತಿಮಾನನನ್ನು ಗುರುತಿಸಿ ಜೀವನದ ಮೌಲ್ಯಗಳ ಹಾಗೂ ಗುಣಗಳ ಆರಾಧಕರಾಗೋಣ ಎಂದು ಕರೆ ನೀಡಿದರು. ಹಾಗೂ ಈ ಸಂದರ್ಭ ೧೦೮ ಏಲಾಚಾರ್ಯ ಪ್ರಗ್ಯಾ ಸಾಗರ, ೧೦೮ ವಿಭಂಜನ ಸಾಗರ, ೧೦೮ ವಿಹರ್ಷ ಸಾಗರ ಮುನಿ ಮಹಾರಾಜ್ ಹಾಗೂ ಸಂಘಸ್ಥ ಸಾಧುಗಳ ಭೇಟಿ ಮಾಡಿ ಧರ್ಮಚರ್ಚೆ ನಡೆಸಿದರು. ೧೯. ೦೨. ೨೦೧೪ರಂದು ದೆಹಲಿಯ ಪ್ರಾಕೃತ ಭಾಷಾ ಅಧ್ಯಯನಕೇಂದ್ರ ಕುಂದಕುಂದಭಾರತಿಯಲ್ಲಿ ವಿರಾಜಮಾನರಾದ ರಾಷ್ಟ್ರಸಂತ ೧೦೮ ವಿದ್ಯಾನಂದ ಮುನಿಮಹಾರಾಜರನ್ನು ಭೇಟಿಯಾದ ಶ್ರೀಶ್ರೀಗಳು ನಂತರ ಕ್ಷೇತ್ರಕ್ಕೆ ಹಿಂದಿರುಗಿದರು.
No comments:
Post a Comment